ಗಾಯಗೊಂಡ ಶ್ವಾನಕ್ಕೆ ಸಹಾಯ ಮಾಡುತ್ತಿದೆ ಈ ರೊಬೊಟ್‌

ಈ ರೊಬೊಟ್‌ ಗಾಯಗೊಂಡ ಶ್ವಾನಕ್ಕೆ ಸಮಯಕ್ಕೆ ಸರಿಯಾಗಿ ಆಹಾರ ನೀಡುತ್ತದೆ ಮತ್ತು ಅದರ ಆರೋಗ್ಯವನ್ನು ನೋಡಿಕೊಳ್ಳುತ್ತದೆ.

ಗಾಯಗೊಂಡ ಶ್ವಾನಕ್ಕೆ ಸಹಾಯ ಮಾಡುತ್ತಿದೆ ಈ ರೊಬೊಟ್‌

Tuesday February 23, 2021,

2 min Read

ಕೋವಿಡ್‌-19 ಲಾಕ್‌ಡೌನ್‌ನಿಂದ ಜನಜೀವನ ಅಸ್ತವ್ಯಸ್ತವಾಯಿತು. ಮನೆಯನ್ನರಸಿ ಹೊರಟ ಸಾವಿರಾರು ವಲಸಿಗರು ಆಹಾರವಿಲ್ಲದೆ ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡಿದರು. ಪ್ರಾಣಿಗಳು ಸೋಂಕನ್ನು ಹರಡಬಹುದು ಎಂದು ತಿಳಿದು ಹಲವರು ಅವುಗಳಿಗೆ ತೊಂದರೆ ಕೊಟ್ಟು ಅವುಗಳಿಗೆ ಆಹಾರ ಸಿಗದಂತಹ ಪರಿಸ್ಥಿತಿ ಎದುರಾಯಿತು. ಮನುಷ್ಯರು ಅವುಗಳಿಗೆ ಹೊಡೆದು ಗಾಯವನ್ನು ಮಾಡಿದ ಘಟನೆಗಳು ವರದಿಯಾಗಿವೆ.


ಅವುಗಳಲ್ಲಿ ಜೊಜೊ ಎಂಬ ಶ್ವಾನವು ಒಂದು. ಹೊಡೆದ ಏಟಿಗೆ ಅದರ ಕಣ್ಣು ಕಿವಿ ಎರಡು ಕೆಟ್ಟು ಹೋಗಿದೆ. ಲಾಕ್‌ಡೌನ್‌ ವೇಳೆ ಲಕ್ನೋದ ಬೀದಿಯಲ್ಲಿ ಈ ಜೊಜೊನನ್ನು ನೋಡಿದ ರೊಬೊಟ್‌ ಹವ್ಯಾಸಿ ಮಿಲಿಂದ್‌ ರಾಜ್‌ ಅದನ್ನು ಮನೆಗೆ ತಂದು ಅದಕ್ಕೆ ಉಪಚರಿಸಿದ್ದಾರೆ.

ಮಿಲಿಂದ್‌ ರಾಜ್‌ (ಚಿತ್ರಕೃಪೆ: ಎಎನ್‌ಐ)

ದಿ ಲಾಜಿಕಲ್‌ ಇಂಡಿಯನ್‌ ಪ್ರಕಾರ ನಾಯಿಗೆ ಜನರು ಕೊಟ್ಟ ಕಷ್ಟ ಎಷ್ಟಿತ್ತೆಂದರೆ ಅದು ಯಾವ ಮನುಷ್ಯನ ಹತ್ತಿರವೂ ಸುಳಿಯುತ್ತಿರಲಿಲ್ಲ. ರಾಜ್‌ ಅದನ್ನು ಕೂಡಲೆ ಪಶುವೈದ್ಯರ ಬಳಿ ತೆಗೆದುಕೊಂಡು ಹೋದಾಗ, ಅವರು ಶ್ವಾನ ಗಾಯಗಳಿಂದ ಚೇತರಿಸಿಕೊಳ್ಳಬೇಕೆಂದರೆ ತುಂಬಾ ಕಾಳಜಿ ವಹಿಸಬೇಕಾಗುತ್ತದೆ ಎಂದರು.


ಆಗ ರಾಜ್‌ ತಾವು ಮನೆಯಲ್ಲಿಲ್ಲದ ಹೊತ್ತಿನಲ್ಲಿ ಸಮಯಕ್ಕೆ ಸರಿಯಾಗಿ ಜೊಜೊಗೆ ಆಹಾರ ನೀಡುವಂತಹ ರೊಬೊಟ್‌ ತಯಾರಿಸಿದರು. ಎಎನ್‌ಐ ಜೊತೆ ಮಾತನಾಡುತ್ತಾ ರಾಜ್‌, “ಕೋವಿಡ್‌ ಸೋಂಕು ಅತಿಯಾಗಿದ್ದ ಹೊತ್ತಿನಲ್ಲಿ ನನಗೆ ಈ ನಾಯಿ ಸಿಕ್ಕಿತು. ಅದನ್ನು ಪಶು ವೈದ್ಯರ ಬಳಿ ತೆಗೆದುಕೊಂಡು ಹೋದಾಗ ಅವರು ಅದರ ಗಂಭೀರ ಸ್ಥಿತಿಯ ಬಗ್ಗೆ ತಿಳಿಸಿದರು. ಹಾಗಾಗಿ ನಾನಿಲ್ಲದ ಹೊತ್ತಿನಲ್ಲಿ ಅದಕ್ಕೆ ಆಹಾರ ನೀಡುವ ಅದರ ಆರೋಗ್ಯ ನೋಡಿಕೊಳ್ಳುವ ರೊಬೊಟ್‌ ನಿರ್ಮಿಸಿದೆ,” ಎಂದರು.


ಜೊಜೊ ಇತರ ಮನುಷ್ಯರೊಂದಿಗೆ ಇರಲು ಹೆದರುತ್ತಿದ್ದರಿಂದ ರೊಬೊಟ್‌ ನಿರ್ಮಿಸುವ ಅವಷ್ಯಕತೆ ಇತ್ತು ಎನ್ನುತ್ತಾರೆ ರಾಜ್‌. ಈ ರೊಬೊಟ್‌ ಶ್ವಾನಕ್ಕೆ ಆಹಾರ ನೀಡುತ್ತದೆ, ಮತ್ತು ಅದರ ಆರೋಗ್ಯವನ್ನು ನೋಡಿಕೊಳ್ಳುತ್ತದೆ.


ಏಳು ತಿಂಗಳ ನಂತರ ಜೊಜೊನ ಹಲವಾರು ಗಾಯಗಳು ವಾಸಿಯಾಗಿವೆ ಜೊತೆಗೆ ಅದಕ್ಕೆ ದೃಷ್ಟಿಯೂ ಬರುತ್ತಿದೆ.


ರಾಜ್‌ ಅವರು ತಂತ್ರಜ್ಞಾನವನ್ನು ಒಳಿತಿಗೆ ಬಳಸಿರುವುದು ಇದೇ ಮೊದಲೆನಲ್ಲ. ಡ್ರೋನ್‌ ಮ್ಯಾನ್‌ ಎಂಬ ಖ್ಯಾತಿ ಹೊಂದಿರುವ ರಾಜ್‌ ಅವರು ಎಪಿಜೆ ಅಬ್ದುಲ್‌ ಕಲಾಂ ಅವರಿಂದಲೂ ಪ್ರಶಸ್ತಿ ಪಡೆದಿದ್ದಾರೆ.


ಲಾಕ್‌ಡೌನ್‌ನಲ್ಲಿ ರಾಜ್‌ ಸ್ಯಾನಿಟೈಸರ್‌ ಡ್ರೋನ್‌ ಎಂಬ ‘ಆಂಟಿ ಕೊರೊನಾ ಡ್ರೋನ್‌ʼನ ಮೂಲ ಮಾದರಿಯನ್ನು ತಯಾರಿಸಿದ್ದರು. ಈ ಡ್ರೋನ್‌ಗೆ ಕ್ಲೀಷ್ಟಕರವಾದ ಶುದ್ಧೀಕರಣದ ಕೆಲಸ ನಿರ್ವಹಿಸುವ ಸಾಮರ್ಥ್ಯವಿತ್ತು. 2018 ರಲ್ಲಿ ರಾಜ್‌ ಲಕ್ನೋದ 20 ಅಡಿಯ ಚರಂಡಿಯಲ್ಲಿ ಸಿಲುಕಿದ್ದ ಪುಟ್ಟ ನಾಯಿಯನ್ನು ರಕ್ಷಿಸಲು ಡ್ರೋನ್‌ ತಯಾರಿಸಿ ಹಲವರ ಮನ ಗೆದ್ದಿದ್ದರು.